ಹೆಸರಿನೊಳಗೇನಿದೆ?

ದರ್ಪ ಸೂಚನೆ ಸುಖದ ವಂಚನೆ
’ಮನು’ ಮನದ ಯಾತನೆ
ಜಾತಿ ಧರ್ಮ ಆಸ್ತಿ ಗೌರವ
ಕಾಣಲಾರವೆ ಹೆಸರೊಳಗೆ?

ಊರ ಗೌಡನ ಹೆಸರು
ಶೂದ್ರ ಸಿದ್ದನದೇನು?
ಗೌಡ ಕರೆದಂತೆ ಕರಿಸಿದ್ದನನ್ನು
ಕೂಗಬಹುದೇ ಹೊಲೆಯ ಗೌಡನನ್ನು?

ಇರಬಹುದು ಒಮ್ಮೊಮ್ಮೆ
ಹೆಸರೊಂದೆ ಈರ್ವರಿಗು
ಒಂದೇ ಮನೆಯಲಿ ಸಣ್ಣ ದೊಡ್ಡ
ಜಾತಿ ಮತಗಳ ನಡುವೆ ದೊಡ್ಡ ಗುಡ್ಡ

ಲಂಗೋಟಿ ಇರದವಗೂ
ಗೌಡನೆಂದೆ, ಸಾಮಿಯೆಂದೆ
ಧಣಿಯೆಂದೆ, ಸಾವ್ಕಾರನೆಂದೆ
ಹಾಗಲ್ಲದಿದ್ದರೆ ಅದು ಜಾತಿ ನಿಂದೆ!

ಒಲವಿತ್ತು ಬಲವಿತ್ತು
ಛಲವಿತ್ತು ಗೆಲುವಿತ್ತು
ಊರಾಚೆಯ ಕರಿಯನಿಂದೆ
ಕರೆದೆ ನೀ ನಿನ್ನದೇ ದೇವರ
’ಲೇ ಬಸ್ಯಾ, ಯಂಕ್ಯಾ, ರಾಗ್ಯಾ, ರಾಮ್ಯಾ…’
ವಕ್ರೋಕ್ರ ಪೆಕರ ಕಾಗೆ ಕರೆವಂತೆ

ಹೆಸರಿನಿಂದಲೆ ಧರ್ಮ
ಹೆಸರಿನಿಂದಲೆ ಕರ್ಮ
ಗೊತ್ತಿಲ್ಲ ಯಾರಿಗೆ ಇದರ ಮರ್ಮ?

ಅಕ್ಬರನೆಂದರೆ ಮುಸ್ಲಿಮನೆಂದೆ
ಆಚಾರಿಯೆಂದರೆ ಹಾರವನೆಂದೆ
ಡೇವಿಡ್ಡು ಆಂಥೋನಿ ಕ್ರಿಸ್ತನೆಂದೆ

ಎಂದಾದರು ಎಲ್ಲಾದರು
ಇಟ್ಟು ಕರೆದೆವೆ ಬೇರೆ ಹೆಸರು
ನಮ್ಮ ಮಕ್ಕಳಿಗೂ ಅದಲು ಬದಲು?

ಮರದ ತುಂಡು
ಕಲ್ಲು ಗುಂಡು
ಊರ ಹೊರಗಿನ ದೇವರು

ಮಾರಮ್ಮ ದುರುಗಮ್ಮ
ಸುಂಕ್ಲಮ್ಮ ಮರಿಗೆಮ್ಮ
ಎಷ್ಟು ಚಂದದ ಹೆಸರು
ಕುರಿ ಕೋಳಿ ಕ್ವಾಣ
ಉಳಿಸಿದ್ದು ಇವರ ನ್ಯಾಣ!

ಚಂದ ಚಂದದ ಮೂರ್ತಿ
ಜಗವ ತುಂಬಿದೆ ಕೀರ್ತಿ
ದೊಡ್ಡ ಮಂದಿಯ ದೇವರು
ಕೃಷ್ಣನಂತೆ ರಾಮನಂತೆ
ಎಲ್ಲಾ ಅವನ ಲೀಲೆಯಂತೆ
ಗೋವಿಂದಾ ಮಾಯೆ ನಿನ್ನ ಹೆಸರು!

ಜಾತಿ ಜಾತಿಗೂ ಒಬ್ಬ
ಧರ್ಮ ಧರ್ಮಕೂ ಮಬ್ಬ
ಸೃಷ್ಟಿಸಿದೆ ಬಲುಚತುರ ಮಾಯಕಾರ

ನಾಮ ನಾಮಗಳ ಹೊಸೆದು
ಒಂದೇ ದಾರದಿ ಬೆಸೆದು
ಜೀವ ಜೀವಕೆ ಜೀವಕೊಡುವುದ
ಬೇಕೆಂತಲೇ ಮರೆತ ಗೆಣೆಕಾರ!

ನಿನ್ನೆ ಮೊನ್ನೆಗಳಿಂದ ಕತ್ತಲೆ ಸೀಳಿ
ನಾಲ್ಕಕ್ಷರದ ಬೆಳಕು ಮೂಡಿ
ಉಟ್ಟ ವಸ್ತ್ರದ ಜೊತೆಗೇ
ಇಟ್ಟ ಹೆಸರುಗಳು ಬದಲಾಗಿ
ಸಂದಿದೆ ನಗರಜೀವನದ ಷೋಕಿ

ಹೆಸರಿನಲ್ಲೇನಿದೆ ಬರೀ ಹೆಸರು
ಲೋಕವಾದರೆ ತಾ ಒಂದೇ ಉಸಿರು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮಿಸುವೆ ಈ ಚೋದ್ಯಕೆ
Next post ವೈಣಿಕ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys